ಪ್ರಿಯ ಕೃಷ್ಣ (ಜನನ ೨೭ ಏಪ್ರಿಲ್ ೧೯೮೪) ಅವರು ಕರ್ನಾಟಕದ ಭಾರತೀಯ ರಾಜಕಾರಣಿ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸದಸ್ಯರಾಗಿದ್ದಾರೆ. ಅವರು ೨೦೦೯ ರಲ್ಲಿ ಬೆಂಗಳೂರಿನ ಗೋವಿಂದರಾಜ್ ನಗರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಅವರು ತಮ್ಮ ೨೫ ನೇ ವಯಸ್ಸಿನಲ್ಲಿ ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರಾಗಿದ್ದರು. == ಆರಂಭಿಕ ಜೀವನ == ಪ್ರಿಯ ಕೃಷ್ಣನವರು ಬೆಂಗಳೂರು ನಗರದಲ್ಲಿ, ೧೯೮೪ ಏಪ್ರಿಲ್ ೨೭ ರಂದು ಜನಿಸಿದರು. ಇವರು ಎಮ್. ಕೃಷ್ಣಪ್ಪ ಮತ್ತು ಪ್ರಿಯದರ್ಶಿನಿ ಕೃಷ್ಣಪ್ಪ ದಂಪತಿಯ ಹಿರಿಯ ಮಗ ಹಾಗೂ ಇವರ ಸಹೋದರ ಪ್ರದೀಪ್ ಕೃಷ್ಣಪ್ಪ. ಇವರ ತಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಕರ್ನಾಟಕದ ಮಾಜಿ ಗೃಹ ಸಚಿವ ಹಾಗು ಮಂಡ್ಯ ಜಿಲ್ಲೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. == ಶಿಕ್ಷಣ == ಕೃಷ್ಣರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ನ್ಯೂ ಕೇಂಬ್ರಿಜ್ ಇಂಗ್ಲಿಷ್ ಸ್ಕೂಲಿನಲ್ಲಿ ಮುಗಿಸಿದ್ದಾರೆ. ತಮ್ಮ ಬಿ.ಎ ಹಾಗು ಎಲ್.ಎಲ್.ಬಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. ನಂತರ ರಾಜ್ಯ ಶಾಸ್ತ್ರದಲ್ಲಿ ಎಮ್.ಎ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. ಪ್ರಿಯ ಕೃಷ್ಣರವರು ಒಬ್ಬ ಕ್ರೀಡಾ ಪ್ರೇಮಿಯೂ ಆಗಿದ್ದಾರೆ. ಇವರು ಗಾಲ್ಫ್ ಆಟಗಾರರಾಗಿದ್ದು ಪಂಜಾಬಿನಲ್ಲಿ ನಡೆದ ೨೦೦೧ ರಾಷ್ಟ್ರೀಯ ಕ್ರೀಡಾಕೂಟದಲ್ಲಿ, ಕರ್ನಾಟಕವನ್ನು ಪ್ರತಿನಿಧಿಸಿದರು. ಪ್ರಿಯ ಕೃಷ್ಣರವರ ತಂದೆ ರಾಜಕಾರಣಿಯಾಗಿದ್ದರಿಂದ, ವಿದ್ಯಾಭ್ಯಾಸದ ದಿನಗಳಿಂದಲೇ ರಾಜಕೀಯದ ಮೇಲೆ ಹೆಚ್ಚು ಆಸಕ್ತಿಯುಳ್ಳವರಾಗಿದ್ದರು. ಅವರು ಕರ್ನಾಟಕದ ಕಾಂಗ್ರೆಸ್ ಪಾರ್ಟಿಯಲ್ಲಿ ೨೦೦೩ ರಿಂದ ಸಚಿವ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. == ರಾಜಕೀಯ ವೃತ್ತಿಜೀವನ == "ಕರ್ನಾಟಕದ ಭವಿಷ್ಯ ನಾವು ನೀಡುವ ವಿದ್ಯಾಭ್ಯಾಸದ ಮೇಲೆಯೇ ಅವಲಂಬಿಸಿದೆ" ಎಂಬುದೇ ಅವರ ಆಳವಾದ ನಂಬಿಕೆಯಾಗಿದೆ. ಈ ಕಾರಣದಿಂದಾಗಿ ಅವರು ಮಕ್ಕಳ ಹಾಗೂ ಯುವಕರ ವಿದ್ಯಾಭ್ಯಾಸ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಇವರು ಬಾಲಕಿ ಮತ್ತು ಯುವಕರಿಗಾಗಿ ಅನೇಕ ಪ್ರಚಾರಗಳು ಹಾಗೂ ಸಾಮಾಜಿಕ ಜಾಗೃತಿ ಕ್ಯಾಂಪ್‍ಗಳನ್ನು ನಿರ್ವಹಿಸಿದ್ದಾರೆ. ಪ್ರಿಯಕೃಷ್ಣರವರು, ೧೬೬ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಗೋವಿಂದರಾಜನಗರ, ಬೆಂಗಳೂರು ನಗರ ಜಿಲ್ಲೆಯ, ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರದ ವಿಭಾಗವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ೨,೮೮,೨೫೧ ಮತದಾರರು ಇದ್ದಾರೆ. ಸಾಮಾನ್ಯ ಮತದಾರರ ಪೈಕಿ ೧,೫೦,೯೬೧ ಪುರುಷರು ಹಾಗೂ ೧,೩೭,೨೩೩ ಮಹಿಳೆಯರು ಮತ್ತು ೫೪ ಇತರರು ಇದ್ದಾರೆ. ೨೦೧೩ ರ ಸಾರ್ವತ್ರಿಕ ಚುನಾವಣೆಯಲ್ಲಿ ಕೃಷ್ಣ ಅವರು ಭಾರತೀಯ ಜನತಾ ಪಕ್ಷದ ವಿರುದ್ಧ ಸ್ಪರ್ಧಿಸಿದ್ದರು. ಸೋಮಣ್ಣ ಅವರು ತಮ್ಮ ಕ್ಷೇತ್ರವನ್ನು ಬದಲಾಯಿಸಿ ನೆರೆಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣ ಅವರ ತಂದೆ ಎಂ.ಕೃಷ್ಣಪ್ಪ ಅವರನ್ನು ಎದುರಿಸಿದರು. ೨೦೧೩ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯ ಕೃಷ್ಣ ೪೨,೪೬೦ ಮತಗಳನ್ನು ಪಡೆದು ಜಯಗಳಿಸಿದರು ಮತ್ತು ಒಟ್ಟು ೫೫.೩೬% ಮತಗಳನ್ನು ಪಡೆದರು. ೨೦೧೮ ರ ಚುನಾವಣೆಗಳಲ್ಲಿ, ಭಾರತೀಯ ಜನತಾ ಪಕ್ಷದ, ವಿ.ಸೋಮಣ್ಣನವರೊಂದಿಗೆ ೧೧,೩೭೫ ಮತಗಳ ಹಿನ್ನಡೆ ಸಾಧಿಸಿ ಪ್ರಿಯಕೃಷ್ಣರವರು ಸೋಲನ್ನು ಅನುಭವಿಸಿದ್ದರು. ಅವರು ಅಭ್ಯರ್ಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಲದಲ್ಲಿ, ಬಡ ಜನರಿಗಾಗಿ ಮನೆಗಳು, ಸಾರ್ವಜನಿಕ ಬೋರೆವೆಲ್‍ಗಳು, ನೀರಿನ ವೆವಸ್ಥೆ, ಒಳಚರಂಡಿ ವ್ಯವಸ್ಥೆ ಮುಂತಾದವುಗಳನ್ನು ಮಾಡಿ ಕೊಟ್ಟಿದ್ದಾರೆ. ೨೦೧೮ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿದ್ದ ಕೃಷ್ಣ ಅವರು ೧,೦೨೦ ಕೋಟಿ ರೂ.ಗಿಂತ ಹೆಚ್ಚಿನ ವೈಯಕ್ತಿಕ ಸಂಪತ್ತನ್ನು ಘೋಷಿಸುವ ಮೂಲಕ ಕಣದಲ್ಲಿದ್ದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದರು. == ಕೊಡುಗೆಗಳು == ಜೆಎನ್‍ಎನ್‍ಯುಆರ್‌ಎಂ ನೆರವಿನೊಂದಿಗೆ ವಿಜಯನಗರ ಟಿಟಿಎಂಸಿ ನಿರ್ಮಾಣ. ವೃಕ್ಷ ಯೋಜನೆಯ ಅನುಷ್ಠಾನಕ್ಕೆ ಬೆಂಬಲ. == ವಿವಾದಗಳು == ತಮ್ಮ ವಿರುದ್ಧ ಅರಣ್ಯ ಭೂಮಿ ಅತಿಕ್ರಮಣದ ಆರೋಪ ಮಾಡಿದ್ದಕ್ಕಾಗಿ ಪ್ರಿಯ ಕೃಷ್ಣ ಅವರು ಕನ್ನಡ ವಾಹಿನಿಯೊಂದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು, ೧೦೦ ಕೋಟಿ ರೂ.ಗಳ ಪರಿಹಾರ ಕೋರಿದ್ದಾರೆ ಮತ್ತು ೫೨ ಲಕ್ಷ ರೂ.ಗಳ ಶುಲ್ಕವನ್ನು ನ್ಯಾಯಾಲಯಕ್ಕೆ ಠೇವಣಿ ಇಟ್ಟಿದ್ದಾರೆ. == ಉಲ್ಲೇಖಗಳು ==